ಅನಂತ ಪ್ರಣಯದ ಕಿರುನೋಟ - ವಿಕ್ರಮ್ ಹತ್ವಾರ್

ಶಾಸ್ತ್ರಗಳಲ್ಲಿ ಒಂದು ಸಂದರ್ಭ: ಚಂದ್ರನಿಗೆ ಕಳಾಹೀನನಾಗುವಂತೆ ಶಾಪ ಬಂದಾಗ (ಯಾರು, ಯಾವಾಗ ಎನ್ನುವುದು ನನಗೆ ನೆನಪಿಲ್ಲ) ಸೃಷ್ಠಿಯ ಜೀವರೂ ಕಳೆಗುಂದಿದವು. ಹೂವುಗಳು ಅರಳಲಿಲ್ಲ, ಸಸ್ಯ ಚಿಗುರೊಡೆಯಲಿಲ್ಲ, ಪಶು-ಪಕ್ಷಿಗಳು ಸಂತಾನ ಪ್ರಾಪ್ತಿಯ ಶಕ್ತಿ ಕಳೆದುಕೊಂಡುವು. ಚಂದ್ರ, ಈಶ್ವರನ ಕುರಿತು ತಪಸ್ಸು ಮಾಡಿದಾಗ, ಪಕ್ಷಗಳವರೆಗೆ ಕಳೆಗುಂದುವ ಮತ್ತೆ ಪಕ್ಷಗಳವರೆಗೆ ಕಳೆಹೊಂದುವ ವರ ಪಡೆದುಕೊಂಡ. ಹೀಗೆ ತಿಂಗಳಿಗೊಮ್ಮೆ ಸಂಪೂರ್ಣವಾಗಿ ಕಳೆಹೊಂದಿ ಬೆಳಗುತ್ತಾನೆ. ಪ್ರಕೃತಿ ಮೈನೆರೆಯಿತು; ಸೃಷ್ಠಿ ಪ್ರಕ್ರಿಯೆ ಮತ್ತೆ ಪ್ರಾರಂಭವಾಯಿತು. ಅಂತೂ ನಮ್ಮಲ್ಲಿ ಚಂದ್ರ ಕಳೆ ಕೀಲುವವನು ಎನ್ನುವ ನಂಬಿಕೆ ಇದೆ.

ಇದರ ಪ್ರಭಾವದಿಂದಲೋ ಏನೋ ಮೂರು ವರ್ಷದ ಹಿಂದೊಮ್ಮೆ ಪೌರ್ಣಮಿಯ ರಾತ್ರಿ ನನಗೆ ಈ ಕವಿತೆ ಹೊಳೆಯಿತು:

ಚಂದಿರನು ಬೆಳದಿಂಗಳ ಬಲೆ ಬೀಸುತಿಹನು
ಯಾವ ಸಖಿಗೋ ಪ್ರಣಯ ಗೀತೆ ಹಾಡುತಿಹನು
ಮುಗಿಲು ಮುತ್ತಿಕ್ಕಲು ಮುಗಿಬೀಳುತಿದೆ
ರಾಸಲೀಲೆಗೆ ಸಮಯ ಸಜ್ಜಾಗುತಿದೆ

ತಂಪಾದ ತುಟಿಗಳಿಂದ
ಕೆಂಪು ದೇಹದ ಮೇಲೆ ಚುಕ್ಕಿಗಳ ಮೂಡಿಸುತ
ಬಯಕೆಯ ಬೆಂಕಿ ಆರಿಸುತ
ಪ್ರೇಮಪುಷ್ಪದ ಕಂಪು ಬೀರುತಿಹನು

ಬಲೆಗೆ ಸಿಲುಕಿ ಬಳುಕಾಡಿದ ಮೇಲೆ
ಉಸಿರಿನ ಬಿಗಿ ಸಡಿಲಾಯಿತು
ತಂಗಾಳಿಯಲಿ ತೇಲಿ ಹಾಯಾದವು ಮುಗಿಲು!
ಒಡಲೊಳಗಿನ ಪ್ರೀತಿ ಅಮೃತದ ಹನಿಯಾಯಿತು

ಧರೆ ಸೇರಿತು ಪ್ರೀತಿ ಮಳೆಯಾಗಿ
ಚಿಗುರೊಡೆಯಿತು ಪ್ರೀತಿ ಹಸಿರಾಗಿ
ಬೆರೆಯಿತು ಪುರುಷನ ರಸವಾಗಿ
ಹೆಣ್ಣೊಳು ಅರಳಿತು ಮಗುವಾಗಿ!

ಇಲ್ಲಿ ಮೋಡಗಳನ್ನು ಸೆಳೆಯಲು ಚಂದ್ರ ಬೆಳದಿಂಗಳನ್ನು ಬಳಸುವ, ಅವುಗಳೊಂದಿಗಿನ ಪ್ರಣಯ, ಆ ಕ್ರಿಯೆಯಲ್ಲಿ ಮೋಡಗಳ ಸಂಘರ್ಷದಿಂದಾಗಿ ಮಳೆ ಎನ್ನುವ ಕಲ್ಪನೆ, ಅದಕ್ಕೆ ಕನ್ನಡಿಯಾಗಿ ಇಲ್ಲಿನ ಪ್ರಣಯ. ಹೀಗೆ ಆ ಪ್ರೀತಿ ಎನ್ನುವುದು ಮಳೆ-ಬೆಳೆ-ರೇತಸ್ಸು-ಜೀವವಾಗಿ ಪರಿಣಾಮ ಹೊಂದುವ ಚಿತ್ರಣವಿದೆ.

ಅದಕ್ಕೂ ಹಿಂದೆ ಹೊಳೆದ ಇನ್ನೊಂದು:

ಕತ್ತಲ ಮನೆಯೊಳಗೆ
ಹದಿನೈದು ದಿನಗಳ ನಂತರ
ಸಿಂಗಾರ ಮುಗಿಸಿದ
ಚಂದ್ರಮನ ಕಿರುನಗೆ- ಬೆಳದಿಂಗಳು!

ಮೊನ್ನೆ ವರಕವಿ ಬೇಂದ್ರೆಯವರ ಜನ್ಮದಿನದ ಅಂಗವಾಗಿ ಅವರದೊಂದು ಕವಿತೆ "ಅರಗಿಸಿಕೊಳ್ಳುವ" ಬಯಕೆ ಮೂಡಿದಾಗ kannadalyrics.com ನಲ್ಲಿ ಕಾಣಿಸಿದ ಕವಿತೆ "ಅನಂತ ಪ್ರಣಯ". ಸಿನಿಮಾ ಒಂದರಲ್ಲಿ ಮುಸ್ಸಂಜೆಯ ಸಂದರ್ಭಕ್ಕೆ ಬಳಸಿಕೊಂಡ ಹಾಡದು ('ಉತ್ತರ ದ್ರುವದಿಂ ದಕ್ಷಿಣ ದ್ರುವಕು....'). ಉದಾಸೀನದಿಂದಲೇ ಓದಿಕೊಂಡೆ. ನಂತರ ಅದರಿಂದ ಹೊರಬರಲಾಗಲಿಲ್ಲ.

ಸೂರ್ಯನ ಪ್ರಭಾವದಿಂದಲೇ ಚಂದ್ರನ ಬೆಳಕು. ಹಾಗೆ ಸೂರ್‍ಯನ ಬಿಂಬಕ್ಕೆ ಚಂದ್ರನ ಬಿಂಬ ಸೇರಿ ರಮಿಸಿದಾಗ ನಕ್ಕ ನಗೆಯೇ ಬೆಳದಿಂಗಳು. ಆ ಬೆಳದಿಂಗಳಿನಲ್ಲಿ ಪ್ರಪಂಚ ಮೀಯುತ್ತಿದೆ. ಈ ಮಿಲಮಹೋತ್ಸವಕ್ಕೆ ಚಂದ್ರ ಆರಿಸಿಕೊಂಡ ವೇದಿಕೆ- ಭೂಮಿ. ತನ್ನ ಮಿತ್ರನ ಮೈತ್ರಿಯ ಶುಭ ಘಳಿಗೆಯ ಹರ್ಷೋದ್ವೇಗದಲ್ಲಿ ಮೈಮರೆಯದೆ, ಮೈನೆರೆತು ಸೃಷ್ಠಿಯಲ್ಲಿ ತೊಡಗಳು ಚಂದ್ರನೆಡೆಗೆ ಕಾತರದಿಂದ ನೋಡುತ್ತಿರುವ ಭೂಮಿಯ ಮೇಲಿನ ಕರುಣೆಯಿಂದ ಚಂದ್ರನು ಅಮೃತಧಾರೆಯಂತಹ ಬೆಳದಿಂಗಳನ್ನು ಲೇಪಿಸಿದನು. ಇದರಿಂದಾಗಿ ಭುವನದ ಹೂವುಗಳು ಅರಳಿದವು, ಪ್ರ್‍ಅಕೃತಿ ಪುಳಕಿಸಿತು, ಚೈತ್ರಾದಿ ಮಾಸಗಳು ಮರಳಿ ಮರಳಿ ಬಂದು ಕೋಟಿ ಕೋಟಿ ಬಾರಿ ಈ ಚಕ್ರದೊಳಗೆ ಭೂಮಿ ಹೊಸೆದುಕೊಂಡಿತು. ಹೀಗೆ, "ತಿಂಗಳು ತಿಂಗಳು" ಸವೆಯುತ್ತ ಸಾಗಿದೆ. ಆ ತಿಂಗಳು(ಚಂದ್ರ) ಒಂದು ಪಕ್ಷದಲ್ಲಿ ತುಂಬುತ್ತಾನೆ, ತುಳುಕುತ್ತಾನೆ. ಇನ್ನೊಂದು ಪಕ್ಷದಲ್ಲಿ ತೀರುತ್ತಾನೆ.

ಭೂಮಿಯಲ್ಲಿನ ಮಿಲನ ಪ್ರಕ್ರಿಯೆಗೆ ಚಾಲನೆ ಕೊಡುವ ಸೂರ್‍ಯ-ಚಂದ್ರರ ಮಿಲನವನ್ನು ನೋಡುವ ತವಕದಲ್ಲಿ ನಕ್ಷತ್ರ ಸಮೂಹ ಅತ್ತಿತ್ತ ತಿರುಗದೆ, ಎವೆಯಿಕ್ಕದೆ ನಿಂತಿದೆ. ಆದರೆ ಇದುವರೆವಿಗೂ ಚಂದ್ರನ ದೇಹದ ಕೆಳಭಾಗದಲ್ಲಿ ಮಿಲನ ಹೊಂದಿರುವ ಯಾವ ಗುರುತುಗಳೂ ಕಾಣಿಸುತ್ತಿಲ್ಲ. ಅಷ್ಟು ಗೋಪ್ಯವಾಗಿ ಅದು ನಡೆದು ಸಾಗಿದೆ.

ಸಿನಿಮಾದಲ್ಲಿ ಹಾಡು ಕೇಳಿದಾಗ ಈ ರೀತಿಯ ಅರ್ಥ ಎಂದೂ ಹೊಳೆದಿರಲಿಲ್ಲ. ಅಲ್ಲಿ ಕಾಣುತ್ತಿದ್ದದ್ದು ಮುಸ್ಸಂಜೆಯ ನೋಟ. ಸಾಹಿತ್ಯದ ಬಗ್ಗೆ ಗಮನವೇ ಇರುತ್ತಿರಲಿಲ್ಲ. ಆದರಿದು ಸೂರ್ಯ-ಚಂದ್ರರ ಮಿಲನದ ಸಂದರ್ಭವನ್ನಲ್ಲದೆ ಅದರ ಪರಿಣಾಮವಾದ ಬೆಳದಿಂಗಳ ಮಹಿಮೆಯನ್ನೇ ಮುಖ್ಯವಾಗಿ ಸಾರುತ್ತಿರುವ ಕವಿತೆ ಎನಿಸುತ್ತದೆ. ನಿಮಗೂ ಹೀಗೇ ಅನಿಸಿದೆಯೇ?. ಈ ಕವಿತೆ ನಿಮಗೆ ಈ ರೀತಿಯೇ ಹೊಳೆದಿತ್ತೇ ಅಥವಾ ಬೇರಾವ ಅರ್ಥ ಹೊರಡಿಸುತ್ತಿದೆ?. ಇನ್ನು ಹೇಗೇಗೆಲ್ಲ ಹೊಳೆದಿತ್ತು?. ನಾನು ನನ್ನ ಕವಿತೆಯ ಮಾರ್ಗದಲ್ಲಿ ಈ ಕವಿತೆಯನ್ನು ಗುರುತಿಸುತ್ತಿದ್ದೇನೆಯೇ ಅಥವಾ ಎರಡೂ ಕವಿತೆಗಳಿಗೆ ನಂಟಿದಿಯೇ?.

Re: ಅನಂತ ಪ್ರಣಯದ ಕಿರುನೋಟ

ಬೇಂದ್ರೆಯವರ ಅನಂತ ಪ್ರಣಯದ ಮೇಲಿನ ವಿಕ್ರಮ್ ಅವರ ವ್ಯಾಖ್ಯಾನ ಬಹಳ ಸ್ವಾರಸ್ಯದಿಂದ ಕೂಡಿದೆ. ಮೊದಲಿಗೆ 'ತಿಂಗಳು ತಿಂಗಳು ನವೆಯುತಿದೆ' ಎಂಬುದಕ್ಕೊಂದು ಅರ್ಥವತ್ತಾದ ದಂತಕಥೆಯ ಹಿನ್ನೆಲೆ ಒದಗಿಸಿದ್ದಾರೆ. ಈ ಕಥೆಯ ಬಗ್ಗೆ ಯಾರಿಗಾದರೂ ಹೆಚ್ಚಿನ ಮಾಹಿತಿ ಇದ್ದಲ್ಲಿ ಅದನ್ನು ನಮ್ಮೆಲ್ಲರೊಡನೆ ಹಂಚಿಕೊಳ್ಳುವಿರಾ? ತಾವೇ ರಚಿಸಿದ ಕವನವೊಂದನ್ನು ವಿಕ್ರಮ್ ಉಲ್ಲೇಖಿಸಿದ್ದಾರೆ. ಚಂದ್ರ-ಮೋಡರೊಳಗಿನ ಪ್ರಣಯವನ್ನು ಅವರು ಬಹಳ ಚೆನ್ನಾಗಿ ಕವನ ರೂಪದಲ್ಲಿ ನಿರೂಪಿಸಿದ್ದಾರೆ. ಅಲ್ಲದೆ, 'ಹುಟ್ಟು' ಎಂಬುದಕ್ಕೊಂದು ಕಲ್ಪಿಸಿದ ಅರ್ಥ ಬಹಳ ಸೊಗಸಾಗಿದೆ. ಮೋಡ-ಚಂದ್ರರೊಳಗಿನ ಪ್ರೇಮ 'ಅಮೃತದ ಹನಿ'ಯಾಗಿ, 'ಪ್ರೀತಿಯ ಮಳೆಯಾಗಿ' ಧರೆಯ ಸೇರಿ, ಬೆಳೆಗೆ ಕಾರಣವಾಯ್ತು; ಅದು 'ಚಿಗುರೊಡೆದು' ಪ್ರೀತಿಯ ಹಸಿರಾಗಿ, ರಸವಾಗಿ, 'ಹೆಣ್ಣೊಳು ಅರಳಿತು ಮಗುವಾಗಿ' ಎಂಬಲ್ಲಿಯೂ ವ್ಯಕ್ತವಾದ ವಿಕ್ರಮರ ಕಲ್ಪನೆಗೆ ತಲೆದೂಗಬೇಕು.
ಇನ್ನು ಅವರು ಬೇಂದ್ರೆಯವರ ಕವನವನ್ನು ವ್ಯಾಖ್ಯಾನಿಸಿದ ರೀತಿ. ಚಲನಚಿತ್ರದಲ್ಲಿ ಹಾಡಿದ ಈ ಕವನ ಅವರ ಮನಸ್ಸಿನ ಮೇಲೆ ಅಷ್ಟೊಂದು ಪರಿಣಾಮ ಮಾಡದೇ ಇದ್ದಲ್ಲಿ ಅದೇನೂ ಆಶ್ಚರ್ಯವಲ್ಲ. ಆದರೆ, ಆ ಕವನವನ್ನು ತಿರುಗಿ ಓದಿ, ತಮ್ಮಲ್ಲಿ ಸುಪ್ತವಾಗಿ ಅಡಗಿದ್ದ ಭಾವವನ್ನು ಹೊರಗೆಡಲು ಅವಕಾಶ ಮಾಡಿಕೊಡುದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಅವರ ಕವನದ ಮೇಲೆ ನಿಮ್ಮೆಲ್ಲರ ವ್ಯಾಖ್ಯಾನ ನಿಜಕ್ಕೂ ಸ್ವಾಗತಾರ್ಹ. ವಿಕ್ರಮ್ ತಮ್ಮ ಕವನದಲ್ಲಿ ಚಂದ್ರ-ಮೋಡರೊಳಗಿನ ಪ್ರಣಯವನ್ನು ನಿರೂಪಿಸಿದ್ದರೆ, ಬೇಂದ್ರೆಯವರ ಕವನದಲ್ಲಿ ಸೂರ್ಯ-ಚಂದ್ರರೊಳಗಿನ ಪ್ರಣಯದ ವಿವರವಿದೆ. ರವಿಯ ಪ್ರೇಮದ 'ಕಾವಿ'ನಿಂದ ಚಂದಿರೆ ಬಳಲಿ, ಅವನಿಗೆ ಮೈಒಡ್ಡಿದಾಗ ಫಲಿಸುವ ಪರಿಣಾಮವೇ ನ್ನಮ್ಮೆಲ್ಲರಿಗೆ, ಅದರಲ್ಲೂ ಪ್ರೇಮಿಗಳಿಗೆ ತಂಪು ಹಿತ ಕೊಡುವ ಬೆಳದಿಂಗಳು. ಸೂರ್ಯ-ಚಂದ್ರರ ಈ ಪವಿತ್ರ ಮಿಲನ ಒಂದು ಅದ್ಭುತ ಚೇತನವೇ ಸರಿ. ಫಲಿತಾಂಶವಾಗಿ, ಪ್ರಕೃತಿಯ ವೈವಿಧ್ಯತೆ, 'ಚೈತ್ರ ಮಾಸಗಳು ಮರಳಿ-ಮರಳಿ ಬಂದು. ಕೋಟಿ ಕೋಟಿ ಬಾರಿ' ಭೂಮಿಯೊಳಗೆ ನಿರಂತರವಾಗಿ ಅಭಿವ್ಯಕ್ತಗೊಳ್ಳುತ್ತದೆ. ಇದನ್ನೆಲ್ಲ ಅನುಭವಿಸುವ ಭಾಗ್ಯ ಭೂಮಿಯದಾಗಿರುತ್ತದ.
'ತಿಂಗಳು ತಿಂಗಳು ನವೆಯುತಿದೆ' - ಇದು ಹುಟ್ಟು-ಸಾವಿವೆಂಬ ಪ್ರಕ್ರಿಯೆಗೆ ವಿಶೇಷ ಅರ್ಥವೊಂದನ್ನು ಒದಗಿಸುತ್ತದೆ. ಹುಟ್ಟು-ಸಾವು ಪ್ರಕೃತಿಯ ನಿಯಮ. ಈ ಪ್ರಕೃತಿ ನಿಯಮ 'ಅನಂತ ಪ್ರಣಯ'ದ ಒಂದು ಅಂಶ. ಈ ನಿಟ್ಟಿನಲ್ಲಿ ಬೇಂದ್ರೆಯವರ ಕವಿತೆಯಲ್ಲಿ ಅಧ್ಯಾತ್ಮಿಕ ನೆಲೆಯನ್ನೂ ನಾವು ಕಾಣಬಹುದು. ಬೇಂದ್ರೆಯವರ ಕವನಗಳಲ್ಲಿ ಅಡಗಿರುವ ಇಂಥ ಭಾವಗಳು ಓದುಗರನ್ನು ಬೆರಗುಗೊಳಿಸಿ, ಅವರನ್ನು ಭಾವಗಡಲಿನಲ್ಲಿ ಮುಳುಗಿಸುತ್ತದೆ.
ಈ ಕವನದಲ್ಲಿ ಅಡಗಿರುವ ಒಂದು ವೈಜ್ಞಾನಿಕ ಸೂತ್ರವನ್ನೂ ನಾವು ಗಮನಿಸಬಹುದು. ಉತ್ತರ ದ್ರುವ ಮತ್ತು ದಕ್ಶಿಣ ದ್ರುವಗಳೊಳ ಮಧ್ಯೆ ಹರಿಯುವ ಶಕ್ತಿ (ಚೈತನ್ಯ)ಒಂದು ವೈಜ್ಞಾನಿಕ ಸಿದ್ಧಾಂತ. ಅದನ್ನು ನಾವು ಆಯಸ್ಕಾತವೆಂದು ಕರೆಯುತ್ತೇವೆ. ಪ್ರೇಮಿಗಳೊಳಗಿನ ಪ್ರಣಯ ಒಂದು ಆಯಸ್ಕಾಂತ ಶಕ್ತಿ ಇದ್ದ ಹಾಗೆ. ಎರಡೂ ಚೈತನ್ಯವನ್ನೇ ಪ್ರತಿನಿಧಿಸುತ್ತದೆ. ಗಮನಿಸಬೇಕಾದ ಅಂಶವೆಂದರೆ, ಚಂದ್ರ-ಸೂರ್ಯರೊಳಗೆ ಬೆಳೆದಂತಹ ಪವಿತ್ರ ಪ್ರಣಯ ಅನಂತವಾದುದು, ಹುಟ್ಟು-ಸಾವೆಂಬ ಕಟ್ಟಿನಿಂದ ದೂರವಾದುದು!
ಮತ್ತೊಮ್ಮೆ, ವಿಕ್ರಮ್ ಹತ್ವಾರರನ್ನು ಅವರ ಸ್ವಾರಸ್ಯಮಯ ವ್ಯಾಖ್ಯಾನಕ್ಕಾಗಿ ಅಭಿನಂದಿಸುತ್ತೇನೆ.

ದಕ್ಷನಿಂದ ಚಂದ್ರನಿಗೆ ಕಳೆ!

ದಕ್ಷ ಪ್ರಜಾಪತಿ ಸತಿಯೊಬ್ಬಳನ್ನು ಬಿಟ್ಟು, ತನ್ನ ಉಳಿದೆಲ್ಲಾ ಹೆಣ್ಣು ಮಕ್ಕಳನ್ನು ಚಂದ್ರನಿಗೆ ಕೊಟ್ಟು ವಿವಾಹ ಮಾಡಿದ್ದನು. ಆದರೆ ಚಂದ್ರನಿಗೆ ಅವರೆಲ್ಲರಲ್ಲೂ ರೋಹಿಣಿ ಎಂಬುವವಳ ಮೇಲೇ ಅತಿಯಾದ ಪ್ರೀತಿಯಿತ್ತು. ಇದರಿಂದ ನೊಂದ ಇತರ ಹೆಣ್ಣು ಮಕ್ಕಳು ದಕ್ಷನಲ್ಲಿ ದೂರು ಹೇಳಿದಾಗ, ಅವನು ಕೊಟ್ಟ ಶಾಪದ ಫಲವಾಗಿ ಚಂದ್ರನಿಗೆ ಕ್ಷಯ ರೋಗ ಉಂಟಾಯಿತು. ಹೀಗೆ ನಶಿಸಿ ಹೋಗುತ್ತಿದ್ದ ಚಂದ್ರ, ನಾರದರ ಉಪದೇಶದ ಮೇರೆಗೆ ಶಿವನನ್ನು ಕುರಿತು ತಪಸ್ಸನ್ನು ಮಾಡಿ, ಅವನನ್ನು ಒಲಿಸಿಕೊಂಡು, ಹದಿನೈದು ದಿನಗಳ ತನಕ ಕಳೆಗುಂದಿ ಮಾಯವಾಗಿ, ಪುನಃ ಇನ್ನುಳಿದ ಹದಿನೈದು ದಿನಗಳಲ್ಲಿ ವೃದ್ಧಿ ಹೊಂದುತ್ತ, ಪೂರ್ಣ ಚಂದ್ರನಾಗಿ ಬೆಳಗುವಂತೆ ವರವನ್ನು ಪಡೆದನು. ಅವನಿಚ್ಛೆಯ ಮೇರೆಗೆ ಶಿವನು ಅದೇ ಲಿಂಗದಲ್ಲಿ ಜ್ಯೋತಿ ರೂಪದಲ್ಲಿ ನೆಲೆಸಿದನು. ಇದೇ ಸೋಮನಾಥೇಶ್ವರ ಜ್ಯೋತಿರ್ಲಿಂಗ.