ಕವನ: ಸುರಸುಮಸಮ - ಸುಪ್ತದೀಪ್ತಿ

ನವಿರುನಿಶೆಯಲಿ ಚಿಮ್ಮಿತ್ತು
ಜೀವ ಚೇತನ ಸ್ಫೂರ್ತಿ
ಯಾವ ಲಾಸ್ಯಕೆ ಒಲಿದಿತ್ತು
ಮೊಗ್ಗಾಗಲಿಹ ಮೂರ್ತಿ

ಹಸಿರು ಹೊದ್ದೇ ಎದ್ದಿದೆ
ಬೆವರು ಮೆದ್ದ ಚಿಗುರು
ಭಾವ ಭಂಗಿಯ ಬಿತ್ತಿದೆ
ಭಿತ್ತಿಯೊಳಗೆ ಉಸಿರು

ಹಿಮಸಿಂಚನ ರೋಮಾಂಚನ
ರಮ್ಯ ರವಿಯ ಸ್ಪರ್ಶ
ಸುರಸುಮವದು ಧರೆಗಿಳಿಯಿತು
ಸೆಳೆದು ಸಕಲಾಕರ್ಷ

ಪಕಳೆಯರಳಿತು ತೆರೆಯಿತು
ಗಂಧ ಚೆಲ್ಲಿ ಮುಗುಳು
ಹಾಸ ಕೋಟಿಯ ಹರಡಿತು
ಬಂಧ ಕಳೆದ ಮರುಳು
- ಸುಪ್ತದೀಪ್ತಿ

ಸ್ವಲ್ಪ ವಿವರಣೆ ಪ್ಲೀಸ್

ಕವಿತೆಯಲ್ಲಿ ಲಯವಿದೆ, ಸೋಜಿಗವಿದೆ, ಪದಗಳ ಸೊಬಗಿದೆ. ಮೇಲುನೋಟಕ್ಕೆ ಪ್ರಾಸಗಳ ಮೆರೆದಾಟ ಕವಿತೆಗೆ ಅನಾವಶ್ಯಕವೆನಿಸುವುದಿಲ್ಲ. ಆದರೆ ಅರ್ಥ ಮಾಡಿಕೊಳ್ಳಲು ಹೊರಟರೆ ಫಜೀತಿ.

ಮೊದಲಿಗೆ ಶೀರ್ಷಿಕೆ ನೋಡಿ ಕವಿತೆ ಓದಿದಾಗ, ಇದು ಬಹುಶಃ ಪಾರಿಜಾತ ಹೂವಿನ ಮೇಲಿನ ಕವಿತೆ ಎನಿಸುತ್ತದೆ. ಮತ್ತೆ ಶೀರ್ಷಿಕೆ ನೋಡಿದಾಗ, 'ಸುರಸುಮಸಮ'!. ಇದೇನು ಸುರಸುಮವಲ್ಲ ಅದಕ್ಕೆ ಸಮನಾದ ಮತ್ತ್ಯಾವುದೋ ಇರಬೇಕು ಎನಿಸುತ್ತದೆ. ಯಾವುದೇ ಮೊಗ್ಗು ಅರಳಿ ತೆರೆದುಕೊಳ್ಳುವ ಪ್ರಕ್ರಿಯೆ ಮತ್ತು ಅದರೆಡೆಗಿರುವ ಬೆರಗು- ಇವುಗಳನ್ನು ಸೂಚಿಸುತ್ತಿರಬಹುದೇನೋ ಎಂದೆನಿಸುತ್ತದೆ.

ಈ ಎರಡೂ ಅರ್ಥಸಾಧ್ಯತೆಗೂ ಇರುವ ಅಡ್ಡಿ: ಹಿಮಸಿಂಚನ. ಮೂರನೆಯ ಪದ್ಯದಲ್ಲಿ ಚಿಗುರು ಮೊಗ್ಗಾಗುವ ಸೂಚನೆ ಇದೆಯೇ?. ಇದ್ದರೆ ಹಿಮಸಿಂಚನದ ಪಾತ್ರವೇನು?(ಹಿಮಸಿಂಚನವೆನ್ನುವುದನ್ನು ಇಬ್ಬನಿಗೆ ಹೋಲಿಸಬಹುದೇ?). ಇಲ್ಲದಿದ್ದರೆ ಮೊಗ್ಗಾಗಲಿಹ ಮೂರ್ತಿ ಮೊಗ್ಗಾಗದೆಯೇ ಅರಳಿತೆ?. ಯಾಕೆಂದರೆ ಎರಡನೆಯ ಪದ್ಯದಲ್ಲಿ ಇನ್ನೂ ಚಿಗುರು, ನಾಲ್ಕನೆಯ ಪದ್ಯದಲ್ಲಿ ಪಕಳೆಯರಳಿತು. ಇದನ್ನು ಸ್ವಲ್ಪ ವಿವರಿಸಿದರೆ ಅನುಕೂಲ.

ಇವೆರಡಷ್ಟೇ ಅಲ್ಲದೆ, ಮಿಲನ ಮಹೋತ್ಸವ, ನಂತರ ಅಂಡಾಣು ಭ್ರೂಣವಾಗಿ ಮಗುವಾಗುವ ಸೋಜಿಗದ ಪರವಾಗಿ ಕವಿತೆಯನ್ನು ತೆರೆದಿಟ್ಟರೆ: ರಮ್ಯ ರವಿಯ ಸ್ಪರ್ಶವೇಕೆ? ಬಂಧ ಕಳೆದ ಮರುಳಾವುದು?. (ಮರಳು ಅಥವಾ ಮರುಳು?. ಮರಳು ಎನ್ನುವುದಾದರೆ ಇಲ್ಲಿ ಪ್ರಾಸ ಅನಾವಶ್ಯಕ. ಕವಿತೆಯ ಅಂದವೇ ಕೆಟ್ಟುಹೋಗುತ್ತದೆ. ಮರಳು ಮಣ್ಣಲ್ಲ). ಈ ಅರ್ಥದಲ್ಲಿ 'ಹಿಮಸಿಂಚನ' ಅತ್ಯಂತ ಅರ್ಥಪೂರ್ಣ ಮತ್ತು ರೋಮಾಂಚನ!.

ಕವಿತೆಯ ಉದ್ದೇಶವೇನೇ ಇದ್ದರೂ, ಒಂದು ನಿರ್ದಿಷ್ಟವಾದ ಅರ್ಥಕ್ಕೆ ಕವಿತೆ ಸಂಪೂರ್ಣವಾಗಿ ಸಹಕರಿಸುತ್ತಿಲ್ಲವೆಂದು ಅನಿಸುತ್ತದೆ. ಒಂದೊಂದು ಸಾಲನ್ನು ಒಂದೊಂದು ಸನ್ನಿವೇಶಕ್ಕೆ ಸೇರಿಸಬೇಕಾಗುತ್ತದೆ. ಕವಿತೆ ಅನೇಕ ಅರ್ಥಗಳನ್ನು ಹೊರಡಿಸಿಲು ಸಫಲವಾದರೂ ಯಾವುದಾದರು ಒಂದು ಅರ್ಥವನ್ನಾದರೂ ಸಂಪೂರ್ಣವಾಗಿ ನೀಡಬೇಕಲ್ಲವೇ?.

ಜೀವ ಚೇತನ ಸ್ಫೂರ್ತಿ ಎನ್ನುವ ಬದಲು ಜೀವ ಚೈತನ್ಯ ಸ್ಫೂರ್ತಿ ಎನ್ನಬಹುದಾಗಿತ್ತಲ್ಲವೇ?.

ಇದೇ ನನ್ನ ಉತ್ತರ:

ಶೀರ್ಷಿಕೆ ಉದ್ದೇಶ ಪೂರ್ವಕವಾಗಿಯೇ "ಸುರ-ಸುಮ-ಸಮ": ಕವಿತೆಯನ್ನು ಒಂದೇ ಅರ್ಥಕ್ಕೆ ಕಟ್ಟಿಹಾಕದಿರಲು. ಸುರಸುಮಕ್ಕೆ ಸಮನಾದ ಇನ್ನೊಂದೇನೋ!!!! ಹೌದು. ಅದು ಬೇರಾವುದೇ ಹೂವಾಗಬಹುದು, ಒಬ್ಬ ನಿಸ್ವಾರ್ಥ ವ್ಯಕ್ತಿಯೂ ಆಗಬಹುದು.

ಮೊದಲ ಚರಣದಲ್ಲಿ ಯಾವುದೋ ಕ್ಷಣದಲ್ಲಿ ಉಂಟಾಗುವ ಹೊಸ ಜೀವೋದಯ: ಹೊಸ ಚಿಗುರಾಗಲು ಗಿಡದ ಯಾವುದೋ ಗಿಣ್ಣಿನ ಕಣ್ಣಿನ ಜೀವಕೋಶವೊಂದು ಪಡೆಯುವ ಅಗೋಚರ ಉತ್ತೇಜಕ ಶಕ್ತಿ, ಎರಡನೆಯ ಚರಣದಲ್ಲಿ ಚಿಗುರೊಡೆದು, ಗಾಳಿ-ಮಳೆ-ಬಿಸಿಲುಗಳಿಗೆ ಮೈಯೊಡ್ಡಿ, ಮೂರನೆಯ ಚರಣದಲ್ಲಿ ಮೊಗ್ಗಾಗಿ, ಅರೆಬಿರಿದು, ಎಲ್ಲರ ಗಮನ ಸೆಳೆದು, ನಾಲ್ಕನೆಯ ಚರಣದಲ್ಲಿ ಬಿರಿದರಳಿ, ಕಂಪು-ಸೊಂಪು ನೀಡಿ, ಕೊನೆಗೆ ಬಾಡಿ ಬೀಳುವ ಒಂದು ನಿರ್ಲಿಪ್ತ ಸುಮ- ಪೂರ್ಣ ಕವನದ ವಸ್ತು.

ಯಾವುದೇ ಚಿಗುರು ಮೊಗ್ಗಾಗಿ ಹೂವಾಗಿ ಅರಳಲು ಹಿಮಸಿಂಚನವೂ ಬೇಕು, ರವಿಯ ಸ್ಪರ್ಶವೂ ಬೇಕು, ರೋಮಾಂಚನ ತರುವ ಗಾಳಿಯೂ ಬೇಕು. ಹಿಮಸಿಂಚನ ಇಬ್ಬನಿಯೂ ಹೌದು, ಋತುವಿನ ಪ್ರತೀಕವೂ ನಿಜ. ಇಲ್ಲಿ ಪದ-ಪದ ವಿಶ್ಲೇಷಣೆಗಿಂತ ಒಟ್ಟಾರೆ ಸಂದೇಶಕ್ಕೆ ಒತ್ತು. ಕಾಲದ, ಋತುಮಾನಗಳ, ನಿಸರ್ಗ ಪ್ರಕ್ರಿಯೆಗಳ ಸೂಚನೆ.

ಬಂಧ ಕಳೆದ "ಮರುಳು"ತನ = ನಮ್ಮ "ಮಾನವ ಸಹಜ ಬಂಧುತ್ವದ ಬಂಧ ಕಳೆದುಕೊಂಡ ನಿರ್ಲಿಪ್ತ ಮುಕ್ತ ಸ್ಥಿತಿ". ಮಾನವತ್ವದ ನಿಶ್ಕಲ್ಮಷ ಗಂಧ ಹರಡಿದ ಮೇಲೆ ಈ ಜೀವನದ ಬಂಧನ ಕಳೆದುಕೊಂಡು ಉರುಳುವ ಜೀವ `ಮರುಳು'ತನದಷ್ಟೇ ಮುಕ್ತವಾಗಿರುತ್ತದೆ ತಾನೆ? ಪ್ರಾಪಂಚಿಕ ಜೀವನಕ್ಕೆ ಅಂಟಿಕೊಂಡಿರುವ ನಮ್ಮದೂ ಒಂದು ರೀತಿಯ `ಮರುಳು'ತನವೇ. ಈ ಪ್ರಾಪಂಚಿಕ ಬಂಧದ ನಮ್ಮ `ಮರುಳು'ತನವನ್ನು ಕಳೆದುಕೊಂಡರೆ? ನಾವೆಲ್ಲ ಮುಕ್ತರು. ಅದು ಸಾರ್ಥಕ `ಪುಷ್ಪ'ದ ಜೀವನ.

prakRutiya

namaskAra jyOti,

Thank you. prakRutiya cheluvannu nimma sogasAda padagaLalli hora hommisiruvudu shlAghanIya.

vishvAsadiMda
vANi

ಬಹಳ

ಬಹಳ ಚೆನ್ನಾಗಿದೆ.. ನಿಮ್ಮ ಭಾಷೆ ತುಂಬಾ ತೂಕದ್ದಾಗಿದೆ.. ಅರ್ಥ ಮಾಡ್ಕೊಳ್ಳೋದು ಸ್ವಲ್ಪ ಕಷ್ಟಾನೇ ಆಯ್ತು

ತೂಕ ಇಳಿಸುವ ಯತ್ನ!!

ಕಾರ್ತಿಕ್, ನಮಸ್ಕಾರ. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಅರ್ಥ ಮಾಡ್ಕೊಳ್ಳೋಕೆ ಕಷ್ಟ ಆಗಿದ್ದು ಯಾವುದು? ತಿಳಿಸಿ. ಸರಳೀಕರಿಸಲು ಪ್ರಯತ್ನಿಸುವೆ.

ಹಾಗಲ್ಲ ರೀ

ಹಾಗಲ್ಲ ರೀ ನಾ ಹೇಳಿದ್ದು .. ಭಾಷೆ ಹೀಗೆ ಇರ್ಬೇಕು ... ಆಗ್ಲೆ ಚೆನ್ನ..

ಹಾಗೂ ನಂಗೆ ಅರ್ಥ ಆಗದೇ ಇದ್ದಿದ್ದು ಕೇಳ್ತೀನಿ..

'ಪಕಳೆಯರಳಿತು' ಅನ್ದ್ರೆ ಏನು ?

ಪಕಳೆಯರಳಿತು ಅಂದರೆ

ಹಾಯ್ ಕಾರ್ತಿಕ್, ಕೇಳಿದ್ದು ಸಂತೋಷ. ಪಕಳೆಯರಳಿತು ಅಂದ್ರೆ ಹೂವಿನ ಎಸಳುಗಳು ಅರಳಿದವು ಅಂತ. ಪಕಳೆ=ಎಸಳು.